ದಕ್ಷಿಣ ಭಾರತದ ತಾಜ್ ಮಹಲ್- ಇಬ್ರಾಹಿಂ ರೋಜಾ!

ವಿಜಯಪುರದ ಇಬ್ರಾಹಿಂ ರೋಜಾ
ವಿಜಯಪುರದ ಇಬ್ರಾಹಿಂ ರೋಜಾ ವಿಹಂಗಮ ನೋಟ
ಇಬ್ರಾಹಿಂ ರೋಜಾ ಕೇವಲ ಒಂದು ಸಮಾಧಿ ಸ್ಮಾರಕವಲ್ಲ. ಇದು ವಿಜಯಪುರದ ಸಾಂಸ್ಕೃತಿಕ ಘನತೆ, ವಾಸ್ತುಶಿಲ್ಪದ ಶ್ರೇಷ್ಠತೆ ಮತ್ತು ಪ್ರೇಮ- ಭಕ್ತಿಯ ಸಂಗಮವನ್ನು ಪ್ರತಿಬಿಂಬಿಸುವ ಅಮೂಲ್ಯ ಪರಂಪರೆ. ಆದಿಲ್ ಶಾಹಿ ಯುಗದ ಕಲೆ, ಸಹಿಷ್ಣುತೆ ಮತ್ತು ಶಾಂತ ಬದುಕಿನ ಸಂಕೇತವಾಗಿ ಈ ಸ್ಮಾರಕ ಇಂದಿಗೂ ನಿಂತಿದೆ.

ವಿಶ್ವ ಪ್ರಸಿದ್ಧ ತಾಜ್ ಮಹಲ್ ಅನ್ನು ನೋಡಿದಾಗ ಜನರಿಗೆ ಮೂಡುವ ಭಾವನೆ, ಅದಕ್ಕಿಂತ ಮೊದಲೇ ದಕ್ಷಿಣ ಭಾರತದಲ್ಲಿ ಮೂಡಿಬಂದಿತ್ತು. ಅದುವೇ ವಿಜಯಪುರದಲ್ಲಿರುವ ಇಬ್ರಾಹಿಂ ರೋಜಾ. ಈ ಕಾರಣಕ್ಕೇ ಇಬ್ರಾಹಿಂ ರೋಜಾವನ್ನು “ದಕ್ಷಿಣ ಭಾರತದ ತಾಜ್ ಮಹಲ್” ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಬಾರಾ ಕಮಾನ್– ಅಪೂರ್ಣವಾಗಿಯೇ ಉಳಿದ ವಿಶ್ವದ ಅದ್ಭುತದ ಕನಸು

ನಿರ್ಮಾಣ ಮತ್ತು ಹಿನ್ನೆಲೆ

ಇಬ್ರಾಹಿಂ ರೋಜಾ ನಿರ್ಮಾಣಗೊಂಡಿದ್ದು ಕ್ರಿ.ಶ.1580ರಿಂದ 1627ರ ನಡುವೆ. ಈ ಸ್ಮಾರಕವನ್ನು ಕಟ್ಟಿಸಿದವರು ಆದಿಲ್ ಶಾಹಿ ವಂಶದ ಮಹಾನ್ ದೊರೆ ಇಬ್ರಾಹಿಂ ಆದಿಲ್ ಷಾ II.ಕಲೆ, ಸಾಹಿತ್ಯ, ಸಂಗೀತ ಮತ್ತು ವಾಸ್ತುಶಿಲ್ಪಕ್ಕೆ ಅಪಾರ ಪ್ರೋತ್ಸಾಹ ನೀಡಿದ ಈ ಸುಲ್ತಾನ ಸ್ವತಃ ಕವಿ ಹಾಗೂ ಸಂಗೀತಗಾರನಾಗಿದ್ದ.

ಸರ್ವಧರ್ಮ ಸಹಿಷ್ಣುತೆಯಲ್ಲಿ ನಂಬಿಕೆ ಇಟ್ಟಿದ್ದ ಇವರನ್ನು ಜನರು ಪ್ರೀತಿಯಿಂದ 'ಜಗದ್ಗುರು ಬಾದಷಾ' ಎಂದು ಕರೆಯುತ್ತಿದ್ದರು. ಅವರ ಆಲೋಚನೆಗಳು ಮತ್ತು ಮೌಲ್ಯಗಳು ಇಬ್ರಾಹಿಂ ರೋಜಾದ ಪ್ರತಿಯೊಂದು ಕಲ್ಲಿನಲ್ಲೂ ಪ್ರತಿಫಲಿಸುತ್ತವೆ.
ವಿಜಯಪುರದ ಇಬ್ರಾಹಿಂ ರೋಜಾ
ಇಬ್ರಾಹಿಂ ರೋಜಾ

ಪ್ರೇಮದಿಂದ ಹುಟ್ಟಿದ ಸ್ಮಾರಕ

ಇಬ್ರಾಹಿಂ ಆದಿಲ್ ಷಾ ತಮ್ಮ ಪ್ರೀತಿಯ ಮಡದಿ ತಾಜ್ ಸುಲ್ತಾನಳಿಗಾಗಿ ಈ ಸ್ಮಾರಕವನ್ನು ಕಟ್ಟಿಸಲು ಮುಂದಾದರು. ಗೋಳಗುಮ್ಮಟವನ್ನು ನಿರ್ಮಿಸಿದ ಪ್ರಸಿದ್ಧ ವಾಸ್ತುಶಿಲ್ಪಿ ಮಲಿಕ್ ಸಂದಲ್ ಈ ಕಾರ್ಯದ ಹೊಣೆ ಹೊತ್ತುಕೊಂಡರು.

ಆದರೆ ದುರದೃಷ್ಟವಶಾತ್, ಸ್ಮಾರಕ ಪೂರ್ಣಗೊಳ್ಳುವ ಮುನ್ನವೇ ಸುಲ್ತಾನನು ಮರಣ ಹೊಂದುತ್ತಾನೆ. ಪತಿಯ ಮೇಲಿನ ಅಪಾರ ಪ್ರೀತಿಯಿಂದ ತಾಜ್ ಸುಲ್ತಾನಳು ಸ್ವತಃ ಮುತುವರ್ಜಿ ವಹಿಸಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುತ್ತಾಳೆ. ನಂತರ ಇಲ್ಲಿ ಇಬ್ರಾಹಿಂ ಆದಿಲ್ ಷಾ ಮತ್ತು ತಾಜ್ ಸುಲ್ತಾನರ ಸಮಾಧಿಗಳನ್ನು ನಿರ್ಮಿಸಲಾಗುತ್ತದೆ. ಹೀಗಾಗಿ ‘ತಾಜ್ ರೋಜಾ’ ಎಂದು ಕರೆಯಬೇಕಿದ್ದ ಸ್ಮಾರಕ, ಇಬ್ರಾಹಿಂ ರೋಜಾ ಎಂಬ ಹೆಸರಿನಿಂದ ಪ್ರಸಿದ್ಧವಾಗುತ್ತದೆ.

ಇದನ್ನೂ ಓದಿ: ಸಂಗೀತ ಮಹಲ್: ಇಬ್ರಾಹಿಂ ಆದಿಲ್ ಷಾನ ಕಲಾಪ್ರೇಮದ ಸ್ಮಾರಕ

ವಾಸ್ತುಶಿಲ್ಪದ ವೈಭವ

ಇಬ್ರಾಹಿಂ ರೋಜಾ ಎರಡು ಪ್ರಮುಖ ಕಟ್ಟಡಗಳನ್ನು ಒಳಗೊಂಡಿದೆ. ಒಂದು – ಸುಲ್ತಾನ ಮತ್ತು ಅವರ ಕುಟುಂಬದವರ ಸಮಾಧಿ ಸ್ಮಾರಕ. ಮತ್ತೊಂದು- ಪ್ರಾರ್ಥನೆಗಾಗಿ ನಿರ್ಮಿಸಲಾದ ಮಸೀದಿ.

ಪರ್ಷಿಯನ್ ಶೈಲಿಯ ಪ್ರಭಾವದೊಂದಿಗೆ ಹಿಂದು- ಮುಸ್ಲಿಂ ವಾಸ್ತುಶಿಲ್ಪದ ಸಂಯೋಜನೆ ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಗೋಡೆಗಳು, ಕಿಟಕಿಗಳು, ದ್ವಾರಗಳ ಮೇಲೆ ಕೆತ್ತಿದ ಸೂಕ್ಷ್ಮ ಕುಸುರಿ ಕೆಲಸಗಳು ನೋಡುವವರ ಕಣ್ಣಲ್ಲಿ ಹಬ್ಬವನ್ನುಂಟು ಮಾಡುತ್ತವೆ. ಕಲ್ಲಿನಿಂದ ಕೆತ್ತಿದ ಸರಪಳಿಗಳು ಮತ್ತು ಹೂವಿನ ವಿನ್ಯಾಸಗಳು ಶಿಲ್ಪಿಗಳ ಅಪಾರ ನೈಪುಣ್ಯವನ್ನು ತೋರಿಸುತ್ತವೆ.
ವಿಜಯಪುರದ ಇಬ್ರಾಹಿಂ ರೋಜಾ
ಇಬ್ರಾಹಿಂ ರೋಜಾದಲ್ಲಿ ಕಂಡು ಬಂದ ಶಿಲ್ಪ ವೈಭವ

ಒಳಾಂಗಣ ಸೌಂದರ್ಯ ಮತ್ತು ವಿನ್ಯಾಸ

ಸಮಾಧಿಯ ಒಳಾಂಗಣದಲ್ಲಿ ಹೂವಿನ ಚಿತ್ರಗಳು ಮತ್ತು ವಸ್ತ್ರ ವಿನ್ಯಾಸಗಳಂತಿರುವ ಕೆತ್ತನೆಗಳು ಕಂಗೊಳಿಸುತ್ತವೆ. ಮಧ್ಯದಲ್ಲಿ ಇಬ್ರಾಹಿಂ ಆದಿಲ್ ಷಾ ಮತ್ತು ತಾಜ್ ಸುಲ್ತಾನರ ಸಮಾಧಿಗಳಿದ್ದು, ಉಳಿದವು ಮಕ್ಕಳು ಮತ್ತು ಮೊಮ್ಮಕ್ಕಳದ್ದು ಎಂದು ಹೇಳಲಾಗುತ್ತದೆ. ಚಪ್ಪಟೆಯಾದ ಮೇಲ್ಭಾಗಗಳು ಮಹಿಳೆಯ ಸಮಾಧಿಯನ್ನು, ಮೊನಚಾದ ಮೇಲ್ಭಾಗಗಳು ಪುರುಷರ ಸಮಾಧಿಯನ್ನು ಸೂಚಿಸುತ್ತವೆ.

ಸಮಾಧಿಗಳ ಕೆಳಗೆ ವಿಶಾಲವಾದ ನೆಲಮಾಳಿಗೆ ಇದ್ದು, ಇದನ್ನು ಹಿಂದೆ ಆಹಾರ ಧಾನ್ಯಗಳು, ಮದ್ದುಗುಂಡುಗಳನ್ನು ಸಂಗ್ರಹಿಸಲು ಹಾಗೂ ಸೈನಿಕರ ಬ್ಯಾರಕ್‌ಗಳಾಗಿ ಬಳಸಲಾಗುತ್ತಿತ್ತು ಎನ್ನಲಾಗುತ್ತದೆ.
ವಿಜಯಪುರದ ಇಬ್ರಾಹಿಂ ರೋಜಾ
ಇಬ್ರಾಹಿಂ ಆದಿಲ್ ಷಾ ಸಮಾಧಿ ಇರುವ ಸ್ಮಾರಕ

ಮಸೀದಿ ಮತ್ತು ಪರಿಸರ

ಸಮಾಧಿ ಮತ್ತು ಮಸೀದಿಯ ಮಧ್ಯೆ ಸುಂದರವಾದ ಕೊಳವಿದೆ. ಮಸೀದಿಯಲ್ಲಿ ಆಯತಾಕಾರದ ಪ್ರಾರ್ಥನಾ ಕೋಣೆ, ಐದು ಕಮಾನುಗಳ ಮುಂಭಾಗ ಮತ್ತು ಸಣ್ಣ ಮಿನಾರಗಳು ಕಂಡುಬರುತ್ತವೆ. ಪ್ರವೇಶದ್ವಾರದ ಎರಡೂ ಬದಿಗಳಲ್ಲಿ ಸಾಲುಸಾಲಾಗಿ ಕಟ್ಟಿರುವ ಕೊಠಡಿಗಳಲ್ಲಿ ಹಿಂದೆ ಸೈನಿಕರು ವಾಸಿಸುತ್ತಿದ್ದರು ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಕರೀಮುದ್ದೀನ್ ಮಸೀದಿ – ದೇವಾಲಯವೇ ಮಸೀದಿಯಾಯಿತೇ?

ಶಿಲ್ಪದಲ್ಲಿ ಉಳಿದ ಪ್ರೇಮ

ಇತಿಹಾಸಕಾರರು ಇಬ್ರಾಹಿಂ ರೋಜಾವನ್ನು 'ದಕ್ಷಿಣ ಭಾರತದ ತಾಜ್ ಮಹಲ್' ಎಂದು ವರ್ಣಿಸಿರುವುದು ಸುಮ್ಮನೇ ಅಲ್ಲ. ಅಮೃತಶಿಲೆಯಲ್ಲಿ ನಿರ್ಮಾಣವಾಗಿದ್ದರೆ, ಈ ಸ್ಮಾರಕವೂ ವಿಶ್ವದ ಅದ್ಭುತಗಳಲ್ಲಿ ಒಂದಾಗುತ್ತಿತ್ತೇನೋ ಎಂಬ ಮಾತು ಇಂದಿಗೂ ಕೇಳಿ ಬರುತ್ತದೆ. ವಿಜಯಪುರಕ್ಕೆ ಬಂದಾಗ, ಈ ಶಾಂತ- ಭವ್ಯ ಸ್ಮಾರಕವನ್ನು ನೋಡದೇ ಮರಳುವುದು ಎಂದರೆ ಇತಿಹಾಸದ ಒಂದು ಅಮೂಲ್ಯ ಅಧ್ಯಾಯವನ್ನು ತಪ್ಪಿಸಿಕೊಂಡಂತೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಜಾತ್ರೆಗಳ ತೊಟ್ಟಿಲು' ವಿಜಯಪುರ ಸಿದ್ಧೇಶ್ವರ ಜಾತ್ರೆ

ಚುಕುಬುಕು ಬಂಡಿಯ ಇತಿಹಾಸ ಹೇಳುವ ಮೈಸೂರು ರೈಲ್ವೆ ಮ್ಯೂಸಿಯಂ!

ಸಿಡಿಲು ಮಲ್ಲಿಕಾರ್ಜುನ ಬೆಟ್ಟ- ಪ್ರಕೃತಿ, ಸಾಹಸ ಮತ್ತು ಭಕ್ತಿಯ ಸಂಗಮ